ಯಾವ ದಿಕ್ಕಿನಲ್ಲಿ ಊಟ ಮಾಡಲೇಬಾರದು ಗೊತ್ತಾ? ತಿನ್ನೋ ತುತ್ತಿಗೂ ಕುರೋ ದಿಕ್ಕಿಗೂ ಸಂಬಂಧವಿದೆ!

ಮನೆಯಲ್ಲಿ ಆಹಾರ ಸೇವಿಸುವಾಗ ಕೆಲವೊಂದು ದಿಕ್ಕಿನಲ್ಲಿ ಕುಳಿತುಕೊಳ್ಳಬಾರದು ಎನ್ನುತ್ತಾರೆ. ಕೆಲವೊಂದು ದಿಕ್ಕಿನಲ್ಲಿ ಕುಳಿತು ಊಟ ಮಾಡಿದರೆ ಸಮಸ್ಯೆಗಳೂ ಪರಿಹಾರವಾಗುತ್ತದೆ ಎನ್ನುತ್ತಾರೆ ವಾಸ್ತುತಜ್ಞರು. ಹಾಗಾದರೆ ಆಹಾರ ಸೇವಿಸುವಾಗ ಯಾವ ದಿಕ್ಕಿನಲ್ಲಿ ಕುಳಿತರೆ ಏನು ಲಾಭ ಎನ್ನುವುದರ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.

ನಿಮ್ಮ ಜಾತಕದಲ್ಲಿ ಅನಿರೀಕ್ಷೀತ ಪ್ರಾಣಾಪಾಯದ ದೋಷವಿದ್ದರೆ ಅಥವಾ ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಲೇಖನದಲ್ಲಿ ತಿಳಿಸಿರುವ ಕೆಲವೊಂದು ವಿಷಯಗಳ ಬಗ್ಗೆ ಗಮನಹರಿಸಲೇಬೇಕು. ಈ ಸಂಗತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು ಎಂಬ ನಂಬಿಕೆ ಇದೆ. ಜೊತೆಗೆ ಗ್ರಹದೋಷಗಳೂ ಕಡಿಮೆಯಾಗಿ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ. ಹಾಗಾದರೆ ಈ ಲೇಖನದಲ್ಲಿ ತಿಳಿಸಲು ಹೊರಟಿರುವ ವಿಷಯವೇನು ಎನ್ನುವುದನ್ನು ತಿಳಿದುಕೊಳ್ಳಲು ಸಂಪೂರ್ಣ ಲೇಖನ ಓದಿ.

​ಜಾತಕದಲ್ಲಿ ಅಕಾಲಿಕ ಸಾವಿನ ಭೀತಿ ಇದ್ದಲ್ಲಿ

ನಿಮ್ಮ ಜಾತಕದಲ್ಲಿ ಅನಿರೀಕ್ಷಿತ ಸಾವು, ನೋವು, ಅಪಘಾತದ ಭಯ ಇದ್ದಲ್ಲಿ, ಆಹಾರ ಸೇವಿಸುವಾಗ ಪೂರ್ವಕ್ಕೆ ಮುಖ ಮಾಡಿ ತಿನ್ನಬೇಕು. ಇದು ಆಯಸ್ಸನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಇದೆ. ಜಾತಕದಲ್ಲಿ ಮಾರಕ ಗ್ರಹವಿದ್ದರೆ ವಿಶೇಷವಾಗಿ ಈ ಬಗ್ಗೆ ಕಾಳಜಿ ವಹಿಸಿ, ಇಂತಹ ಸಂದರ್ಭ ಬಂದಾಗ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಆಹಾರ ಸೇವಿಸುವುದನ್ನು ಮರೆಯದಿರಿ. ಇದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರುವುದಲ್ಲದೇ ಅಕಾಲಿಕ ಮರಣ ಭಯವೂ ಇರುವುದಿಲ್ಲ.

​ಸದಾ ಅನಾರೋಗ್ಯವು ಕಾಡುತ್ತಿದ್ದಲ್ಲಿ

ಯಾವಾಗ ನೋಡಿದರೂ ನಿಮಗೆ ಆರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದಲ್ಲಿ ಅಥವಾ ಮನೆಯ ಸದಸ್ಯರ ಆರೋಗ್ಯವು ಯಾವಾಗಲೂ ಕೆಡುತ್ತಿದ್ದಲ್ಲಿ, ಪಶ್ಚಿಮಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬೇಕು. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. ಉತ್ತಮ ಆರೋಗ್ಯ, ರೋಗ ತಡೆಗಟ್ಟುವಿಕೆಗಾಗಿ ವಾಸ್ತುವಿನಲ್ಲಿ ಪಶ್ಚಿಮ ದಿಕ್ಕಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದಕ್ಕಾಗಿಯೇ ತಜ್ಞರು ರೋಗಿಗಳಿಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸಲು ಹೇಳುತ್ತಾರೆ.

​ಹಣಕಾಸಿನ ಸಮಸ್ಯೆ ಇದ್ದಲ್ಲಿ

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೆ ಅಥವಾ ಹಣದ ಉಳಿತಾಯವನ್ನೇ ಮಾಡಲಾಗದಿದ್ದರೆ, ಉತ್ತರಕ್ಕೆ ಮುಖ ಮಾಡಿ ಆಹಾರ ಸೇವಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ ಮನೆಯ ಮುಖ್ಯಸ್ಥನಾದವನು ಯಾವಾಗಲೂ ಉತ್ತರಕ್ಕೆ ಎದುರಾಗಿ ಕುಳಿತು ಊಟವನ್ನು ಮಾಡಬೇಕು. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ.

ಋಣಾತ್ಮಕ ಶಕ್ತಿಯ ಪ್ರಾಬಲ್ಯ

ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸುವುದನ್ನು ನಿರ್ಬಂಧಿಸಲಾಗಿದೆ. ಯಾಕೆಂದರೆ ಈ ದಿಕ್ಕನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ದಿಕ್ಕಿನಲ್ಲಿ ನಕಾರಾತ್ಮಕ ಶಕ್ತಿಗಳು ಬೇಗನೇ ಪ್ರಾಬಲ್ಯವನ್ನು ಸಾಧಿಸುತ್ತವೆ. ಹಾಗಾಗಿ ಈ ದಿಕ್ಕಿಗೆ ಮುಖ ಮಾಡಿ ಕುಳಿತು ಆಹಾರ ಸೇವಿಸಿದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಹೆಚ್ಚು ಸುಳಿದಾಡುವುದಲ್ಲದೇ, ಇಂತವರಿಗೆ ಪ್ರೇತಬಾಧೆಯೂ ಹೆಚ್ಚು ಎನ್ನುವ ನಂಬಿಕೆ ಇದೆ. ಇಂತಹ ಸಮಸ್ಯೆ ಇದ್ದಲ್ಲಿ ಎಂದಿಗೂ ದಕ್ಷಿಣಕ್ಕೆ ಮುಖ ಮಾಡಿ ಊಟ ಮಾಡಬೇಡಿ. ಇದರಿಂದ ಜೀವನದಲ್ಲಿ ನಕಾರಾತ್ಮಕ ಅಂಶಗಳೇ ಮೇಲುಗೈ ಸಾಧಿಸುತ್ತದೆ, ಶುಭವಾದದ್ದು ಏನೂ ನಡೆಯದು.

Leave a Comment