ಶನಿ ದೇವರಿಗೆ ಸಾಸಿವೆ ಎಣ್ಣೆ ಅರ್ಪಿಸುವುದೇಕೆ? ಇಲ್ಲಿದೆ ಕುತೂಹಲಕಾರಿ ಕಥೆ!

ಶನಿದೇವರಿಗೆ ಸಾಸಿವೆ ಎಣ್ಣೆ ಅರ್ಪಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಅದೂ ಅಲ್ಲದೆ, ಶನಿವಾರ ಆಂಜನೇಯ ಸ್ವಾಮಿಯ ಪೂಜೆಗೂ ಬಲು ಮಹತ್ವ ಇದೆ. ಶನಿವಾರ ಆಂಜನೇಯ ಸ್ವಾಮಿಯನ್ನು ಪೂಜಿಸುವವರಿಗೆ ಶನಿ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬುದು ಕೂಡಾ ನಂಬಿಕೆ. ಶನಿ ದೇವರನ್ನು ನ್ಯಾಯದ ದೇವರು ಎಂದೂ ಕರೆಯಲಾಗುತ್ತದೆ. ಯಾಕೆಂದರೆ, ಮನುಷ್ಯರ ಕರ್ಮಕ್ಕೆ ಅನುಗುಣವಾಗಿ ಶನಿಯ ಪ್ರಭಾವ ಇರುತ್ತದೆ. ಹೀಗಾಗಿ, ಶನಿವಾರದಂದು ಎಲ್ಲರೂ ಶನಿ ದೇವರನ್ನು ಪೂಜೆ ಸಲ್ಲಿಸುತ್ತಾರೆ. ಆದರೆ, ಶನಿವಾರ ಶನಿ ದೇವನಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಲಾಗುತ್ತದೆ. ಇದರ ಹಿಂದಿನ ಕಾರಣ ಏನು…? ಇಲ್ಲಿ ನೋಡೋಣ…

ಆಂಜನೇಯ ಮತ್ತು ಶನಿದೇವರ ಮುಖಾಮುಖಿ

ಅದು ಆಂಜನೇಯ ಸ್ವಾಮಿ ರಾಮಸೇತು ಬಳಿ ಧ್ಯಾನದಲ್ಲಿ ಮಗ್ನನಾಗಿದ್ದ ಸಮಯ. ಇದೇ ಸಮಯಕ್ಕೆ ಅದೇ ದಾರಿಯಲ್ಲಿ ಶನಿ ದೇವನ ಆಗಮನವಾಗುತ್ತದೆ. ಧ್ಯಾನ ಮಗ್ನನಾಗಿ ಕುಳಿತಿದ್ದ ಆಂಜನೇಯನನ್ನು ಕಂಡ ಶನಿಗೆ ಹನುಮಂತನಿಗಿಂತ ಶಕ್ತಿಶಾಲಿಗಳು ಈ ಬ್ರಹ್ಮಾಂಡದಲ್ಲಿ ಯಾರೂ ಇಲ್ಲ ಎಂದು ಯಾಕೆ ಎಲ್ಲರೂ ನಂಬಿದ್ದಾರೆ' ಎಂಬ ಪ್ರಶ್ನೆ ಕಾಡಿತ್ತು. ಜತೆಗೆ, ತನಗಿಂತ ಹನುಮಾನ್ ಶಕ್ತಿಶಾಲಿಯೇ ಎಂದು ಪರೀಕ್ಷಿಸುವ ಮನಸ್ಸಾಗಿತ್ತು. ಹೀಗಾಗಿ, ಹನುಮಂತನನ್ನು ಕಂಡು ನಾವಿಬ್ಬರು ಯಾಕೆ ಯುದ್ಧದಲ್ಲಿ ತೊಡಗಿಕೊಳ್ಳಬಾರದು ಎಂದು ಶನಿ ಆಹ್ವಾನಿಸುತ್ತಾನೆ. ಆಗಇದು ನನ್ನ ಪೂಜಾ ಸಮಯ. ನಾನೀಗ ಧ್ಯಾನದಲ್ಲಿದ್ದೇನೆ. ನೀನು ಬೇರೆ ಕಡೆ ಹೋಗಿ ಬೇರೆಯವರೊಂದಿಗೆ ಯುದ್ಧ ಮಾಡು’ ಎಂದು ಶನಿದೇವನಿಗೆ ಹೇಳುತ್ತಾನೆ. ಅಂದರೆ, ಶನಿಯನ್ನು ಸಮಾಧಾನ ಮಾಡಿ ಅಲ್ಲಿಂದ ಕಳಿಸಲು ಹನುಮಂತ ಯೋಚಿಸಿದ್ದ. ಹೀಗೆ ಹೇಳಿದ ಬಳಿಕ ಭಜರಂಗಬಲಿ ಮತ್ತೆ ಧ್ಯಾನದಲ್ಲಿ ಕುಳಿತುಕೊಳ್ಳುತ್ತಾನೆ…

ಆಂಜನೇಯನ ಮೇಲೆ ಶನಿಗೆ ಸಿಟ್ಟು

ತನ್ನ ಮಾತನ್ನು ಕೇಳದೆ ಮತ್ತೆ ಧ್ಯಾನಕ್ಕೆ ಸಿದ್ಧನಾದ ಹನುಮಂತನನ್ನು ಕಂಡು ಶನಿಗೆ ಕೆಂಡದಂತಹ ಸಿಟ್ಟು ಬಂದಿತ್ತು. ಹೀಗಾಗಿ, ಧ್ಯಾನದಲ್ಲಿ ಕುಳಿತಿದ್ದ ಆಂಜನೇಯನ ಬಳಿಗೆ ಬಂದ ಶನಿ ಹೊಡೆಯಲು ಆರಂಭಿಸುತ್ತಾನೆ. ಈ ವೇಳೆ, ಆಂಜನೇಯ ಸ್ವಾಮಿ ತನ್ನ ಬಾಲದ ಸಹಾಯದಿಂದ ಶನಿಯನ್ನು ಬಿಗಿಯಾಗಿ ಬಂಧಿಸಿ ಧ್ಯಾನದಲ್ಲಿ ಮಗ್ನನಾಗುತ್ತಾನೆ. ಬಳಿಕ ರಾಮಸೇತು ಬಳಿ ಹನುಮಾನ್ ಎಂದಿನಂತೆ ವಿಹರಿಸುತ್ತಾನೆ. ಆಗಲೂ ಶನಿ ಆಂಜನೇಯನ ಬಿಗಿಯಾದ ಬಂಧನಲ್ಲಿರುತ್ತಾನೆ. ಈ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಶನಿಗೆ ಅದು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ಶನಿಗೆ ಸಾಕಷ್ಟು ಗಾಯಗಳೂ ಆಗಿದ್ದವಂತೆ.

ತಪ್ಪಿನ ಅರಿವು
ಹನುಮಂತ ಸಂಪೂರ್ಣ ಶ್ರೀರಾಮ ಸ್ಮರಣೆಯನ್ನು ತನ್ನನ್ನು ಮರೆತಿದ್ದ. ಶ್ರೀರಾಮ ದೇವರ ಪ್ರಾರ್ಥನೆಯ ಬಳಿಕ ಆಂಜನೇಯ ಸ್ವಾಮಿಗೆ ಶನಿಯ ನೆನಪಾಗಿತ್ತು. ಹೀಗಾಗಿ, ಶನಿಯನ್ನು ಬಿಡುಗಡೆಗೊಳಿಸಿದ್ದ. ಇದಾದ ಬಳಿಕ ಶನಿ ದೇವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಹೀಗಾಗಿ, ಆಂಜನೇಯ ಸ್ವಾಮಿ ಬಳಿ ಶನಿ ಕ್ಷಮೆಯನ್ನೂ ಕೇಳಿದ್ದ. ಜತೆಗೆ, ತನ್ನ ಗಾಯಗಳ ಉಪಶಮನಕ್ಕೆ ಸಾಸಿವೆ ಎಣ್ಣೆಯನ್ನು ನೀಡುವಂತೆ ಹನುಮಾನ್‌ ಬಳಿ ಕೇಳುತ್ತಾನೆ. ಅಂತೆಯೇ, ಹನುಮಂತ ಶನಿಗೆ ಸಾಸಿವೆ ಎಣ್ಣೆಯನ್ನು ನೀಡುತ್ತಾನೆ. ಇದರಿಂದ ಶನಿಗೆ ಆಗಿದ್ದ ಗಾಯಗಳೆಲ್ಲಾ ವಾಸಿಯಾದವಂತೆ.

ಸಾಸಿವೆ ಎಣ್ಣೆಯ ಅರ್ಪಣೆ

ಆಂಜನೇಯ ಸ್ವಾಮಿ ನೀಡಿದ ಸಾಸಿವೆ ಎಣ್ಣೆಯಿಂದ ಶನಿಯ ಗಾಯಗಳೆಲ್ಲಾ ಮಾಯವಾಗಿದ್ದವು. ಜತೆಗೆ, ಶನಿಗೆ ಆಂಜನೇಯ ಸ್ವಾಮಿಯ ಶಕ್ತಿಯ ಬಗ್ಗೆಯೂ ಅರಿವಾಗಿತ್ತು. ಹೀಗಾಗಿ, ಇದೇ ನೆನಪಿನಲ್ಲಿ ಶನಿವಾರದಂದು ತನಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವ ಭಕ್ತರಿಗೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಶನಿ ದೇವರು ಹೇಳಿದ್ದಾಗಿ ನಂಬಿಕೆ. ಅಂದಿನಿಂದ ಶ್ರೀರಾಮ ಮತ್ತು ಆಂಜನೇಯ ಸ್ವಾಮಿಯ ಭಕ್ತರು ಶನಿಯ ವಿಶೇಷ ಆಶೀರ್ವಾದ ಪಡೆಯುತ್ತಾರೆ ಎಂಬ ನಂಬಿಕೆ ಕೂಡಾ ನಮ್ಮಲ್ಲಿದೆ. ಹೀಗಾಗಿ, ಶನಿ ದೇವರನ್ನು ಮೆಚ್ಚಿಸಲು, ವಿಶೇಷ ಅನುಗ್ರಹವನ್ನು ಪಡೆಯಲು ಸಾಸಿವೆ ಎಣ್ಣೆಯನ್ನು ಅರ್ಪಿಸಲಾಗುತ್ತದೆ. ಜತೆಗೆ, ಸಾಸಿವೆ ಎಣ್ಣೆಯ ದೀಪವನ್ನೂ ಬೆಳಗುವುದು ವಾಡಿಕೆ. ಜತೆಗೆ, ಶನಿವಾರ ಆಂಜನೇಯ ಸ್ವಾಮಿಯ ಪೂಜೆ ಮಾಡಿದವರಿಗೂ ಶನಿ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.
ಕಪ್ಪು ವಸ್ತುಗಳ ಪ್ರಿಯ

ಶನಿವಾರ ಶನಿದೇವರಿಗೆ ಸಮರ್ಪಿತವಾದ ವಾರ. ಶನಿವಾರ ಶನಿದೇವರ ಪೂಜೆಗೆ ಬಲು ಮಹತ್ವವಿದೆ. ಈ ದಿನ ಶನಿದೇವರ ಪೂಜೆಯನ್ನು ಮಾಡಿದರೆ ಕಷ್ಟಗಳು ದೂರವಾಗುತ್ತವೆ ಎಂಬುದು ನಂಬಿಕೆ. ಇನ್ನು ಶನಿ ದೇವರಿಗೆ ಕಪ್ಪು ವಸ್ತುಗಳು ಪ್ರಿಯ. ಇದೇ ಕಾರಣದಿಂದ ಸಾಸಿವೆ ಎಣ್ಣೆ, ಕಪ್ಪು ಎಳ್ಳುಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಇವೆಲ್ಲವನ್ನೂ ಬಳಸಿ ಪೂಜೆ ಮಾಡುವುದರಿಂದ ಮಂಗಳಕರ ಫಲಿತಾಂಶ ಲಭಿಸುತ್ತದೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ಅದೂ ಅಲ್ಲದೆ, ಶನಿವಾರ ಅಶ್ವತ್ಥ ಮರದ 11 ಎಲೆಗಳನ್ನು ತೆಗೆದುಕೊಂಡು ಹಾರವನ್ನು ಮಾಡಿ ಅದನ್ನು ಹತ್ತಿರದ ಶನಿ ದೇವಸ್ಥಾನಕ್ಕೆ ಅರ್ಪಿಸಿದರೂ ಒಳಿತಾಗುತ್ತದೆ ಎಂಬುದು ನಂಬಿಕೆ. ಜತೆಗೆ, ಅಶ್ವತ್ಥದ ಮರಕ್ಕೆ ಏಳು ಬಾರಿ ಪ್ರದಕ್ಷಿಣೆ ಬಂದು ಹಸಿ ಹತ್ತಿಯ ದಾರವನ್ನು ಏಳು ಬಾರಿ ಸುತ್ತಿದರೂ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಶನಿವಾರ ಆಂಜನೇಯ ಸ್ವಾಮಿಯನ್ನೂ ಎಲ್ಲರೂ ಭಕ್ತಿಯಿಂದ ನಮಿಸುತ್ತಾರೆ. ಆಂಜನೇಯ ಸ್ವಾಮಿಯ ಆರಾಧನೆಯಿಂದಲೂ ಶನಿಯ ಅನುಗ್ರಹ ಪಡೆಯಬಹುದು ಎಂಬುದು ನಂಬಿಕೆ.

Leave a Comment