ಮುಟ್ಟಿನ ಸಮಯದಲ್ಲಿ ಆಗುವಂತಹ ಹೊಟ್ಟೆ ನೋವಿಗೆ ಇಲ್ಲಿದೆ ಮನೆಮದ್ದು!

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ಸಮಸ್ಯೆಯಿಂದ ನೋವು ಹಾಗೂ ಸಂಕಟಗಳು ಕಾಡುವುದು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು, ಅಂತರ್ನಿರ್ಮಿತ ಒಳಪದರಗಳನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಸ್ನಾಯುಗಳು ತೀವ್ರವಾದ ಸೆಳೆತ ಮತ್ತು ನೋವಿಗೆ ಒಳಗಾಗುತ್ತದೆ. ಕೆಲವರು ಋತುಚಕ್ರದ ಸಂದರ್ಭದಲ್ಲಿ ವಾಕರಿಕೆ, ಅತಿಸಾರ, ತಲೆನೋವು ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳಿಂದ ಜರ್ಜರಿತರಾಗುತ್ತಾರೆ. ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಯಾವ ರೀತಿಯ ಮನೆ ಪರಿಹಾರಗಳನ್ನು ಮಾಡಬಹುದು? ಅವು ಹೇಗೆ ಪರಿಣಾಮಕಾರಿಯಾದ ವಿಶ್ರಾಂತಿಯನ್ನು ನೀಡುತ್ತವೆ? ಎನ್ನುವುದನ್ನು ನಿಮಗಾಗಿ ಈ ಮುಂದೆ ವಿವರಿಸಲಾಗಿದೆ

​ಮುಟ್ಟಿನ ನೋವು ಏಕೆ ಉಂಟಾಗುವುದು?

ಮಹಿಳೆಯರಿಗೆ ಋತುಸ್ರಾವ ಎನ್ನುವುದು ಪ್ರಕೃತಿಯ ವರ. ಈ ಪ್ರಕ್ರಿಯೆಯು ಪ್ರಾಯಕ್ಕೆ ಬಂದ ಮಹಿಳೆಯರಲ್ಲಿ ನೈಸರ್ಗಿಕವಾಗಿಯೇ ಉಂಟಾಗುತ್ತದೆ. ಆದರೆ ಆ ಸಮಯದಲ್ಲಿ ಉಂಟಾಗುವ ನೋವು ಹಾಗೂ ಭಾವನತ್ಮಕ ಬದಲಾವಣೆಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನ ರೀತಿಯಲ್ಲಿರುತ್ತದೆ. ಹದಿಹರೆಯದ ಹುಡುಗಿಯರಲ್ಲಿ ಹಾಗೂ ಮಕ್ಕಳನ್ನು ಹೊಂದಿರದ ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಹೆಚ್ಚು. ಅಧಿಕ ರಕ್ತ ಸ್ರಾವ ಉಂಟಾಗುವುದರಿಂದ, ಗರ್ಭದ ಮೇಲೆ ಹಾರ್ಮೋನ್‍ಗಳ ಪ್ರಭಾವ ಉಂಟಾಗುವುದರಿಂದಲೂ ಸಾಕಷ್ಟು ನೋವು ಹಾಗೂ ಆರೋಗ್ಯದಲ್ಲಿ ಬದಲಾವಣೆ ಉಂಟಾಗುತ್ತವೆ. ಕ್ಯಾಲ್ಸಿಯಂ ಕೊರತೆ ಹಾಗೂ ಸಿ ಸೆಕ್ಷನ್ ಪ್ರಸವ ಹೊಂದಿರುವ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಅಧಿಕ ಬೆನ್ನು ನೋವು ಮತ್ತು ಪೆಲ್ವಿಕ್ ಮೂಳೆಯ ನೋವು ಕಾಣಿಸಿಕೊಳ್ಳುತ್ತವೆ.

​ಶಾಖವನ್ನು ಪಡೆದುಕೊಳ್ಳಿ
ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಮತ್ತು ಮೂಳೆ ನೋವಿಗೆ ಉತ್ತಮ ಮನೆ ಪರಿಹಾರ ಎಂದರೆ ಶಾಖವನ್ನು ಪಡೆದುಕೊಳ್ಳುವುದು. ಬಿಸಿ ನೀರನ್ನು ಹಾಟ್ ವಾಟರ್ ಬ್ಯಾಗ್‍ನ ಮೂಲಕ ಅಥವಾ ಒಂದು ಗಾಜಿನ ಬಾಟಲಿಯಲ್ಲಿ ಬಿಸಿ ನೀರನ್ನು ತುಂಬಿಕೊಂಡು ಶಾಖವನ್ನು ಪಡೆಯಬಹುದು. ಎಲ್ಲೆಲ್ಲಿ ನೋವು ಉಂಟಾಗುತ್ತದೆಯೋ ಆ ಸ್ಥಳದಲ್ಲಿ ಸುಲಭವಾಗಿ ಬಿಸಿ ನೀರಿನ ಶಾಖ ನೀಡಿ. ಆಗ ಸ್ನಾಯುಗಳು ವಿಶ್ರಾಂತಿಯನ್ನು ಪಡೆದುಕೊಂಡು, ನೋವಿನ ಸೆಳೆತವನ್ನು ನಿವಾರಿಸುತ್ತದೆ. ಶಾಖವನ್ನು ಪಡೆದುಕೊಳ್ಳಲು ಅನಾನುಕೂಲತೆ ಇದ್ದವರು ಹೆಚ್ಚು ಬಿಸಿ ನೀರಿನ ಸ್ನಾನ ಮಾಡುವುದರ ಮೂಲಕ ಪರಿಹಾರ ಕಾಣಬಹುದು.

​ಎಣ್ಣೆಯ ಮಸಾಜ್
ಋತು ಸ್ರಾವದ ಸಮಯದಲ್ಲಿ ಹೊಟ್ಟೆಯ ಸುತ್ತಲೂ ಲ್ಯಾವೆಂಡರ್ ಎಣ್ಣೆಯನ್ನು ಅನ್ವಯಿಸಿಕೊಳ್ಳಬೇಕು. ನೋವಿನ ಸಮಯದಲ್ಲಿ ಲ್ಯಾವೆಂಡರ್ ಎಣ್ಣೆಯನ್ನು ಅನ್ವಯಿಸಿಕೊಳ್ಳುವುದರಿಂದ ಅಧಿಕ ನೋವಿನ ಸೆಳೆತವನ್ನು ಶಮನಗೊಳಿಸಬಹುದು. ಎಳ್ಳೆಣ್ಣೆಯನ್ನು ಹೊಟ್ಟೆಯ ಭಾಗದಲ್ಲಿ ಹಾಗೂ ಬೆನ್ನಿನ ಭಾಗಕ್ಕೆ ಅನ್ವಯಿಸಿಕೊಂಡು ಮೃದುವಾದ ಮಸಾಜ್ ಮಾಡಬೇಕು. ಎಳ್ಳೆಣ್ಣೆ ಲಿನೋಲಿಕ್ ಆಮ್ಲದಿಂದ ಸಮೃದ್ಧವಾಗಿರುತ್ತದೆ. ಇದು ಉರಿಯೂತಗಳನ್ನು ಹಾಗೂ ಸ್ನಾಯುಗಳ ಸೆಳೆತವನ್ನು ಸುಲಭವಾಗಿ ನಿವಾರಿಸುವುದು. ಜೊತೆಗೆ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುವುದು.

​ಸೊಂಪುಗಳನ್ನು ಸೇವಿಸಿ

ಸೋಂಪಿನ ಕಾಳು ಎಲ್ಲರ ಮನೆಯಲ್ಲೂ ಇರುವ ಒಂದು ಸಾಂಬಾರು ಪದಾರ್ಥ. ಇದು ಅತ್ಯುತ್ತಮ ಔಷಧೀಯ ಗುಣಗಳನ್ನು ಪಡೆದುಕೊಂಡಿದೆ. ಮಹಿಳೆಯರಲ್ಲಿ ಹಾರ್ಮೋನ್‍ಗಳ ಸಮತೋಲನವನ್ನು ಪುನಃ ಸ್ಥಾಪಿಸಲು ಸಹಾಯ ಮಾಡುವ ಮೂಲಕ ಮುಟ್ಟಿಗೆ ಸಂಬಂಧಿಸಿದ ಸೆಳೆತ, ಅಸ್ವಸ್ಥತೆ ಹಾಗೂ ನೋವುಗಳನ್ನು ನಿವಾರಿಸುತ್ತದೆ. ಸೋಂಪಿನ ಕಾಳುಗಳು ನೈಸರ್ಗಿಕವಾಗಿ ಮೂತ್ರವರ್ಧಕ ಮತ್ತು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ದೇಹದಲ್ಲಿ ನೀರಿನಂಶವನ್ನು ಹಿಡಿದಿಡುವ ಮೂಲಕ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಸಹ ನಿವಾರಿಸುವುದು. ಸೊಂಪನ್ನು ಊಟದ ನಂತರ ಅಥವಾ ಕಾಲಿ ಹೊಟ್ಟೆಯಲ್ಲಿ ಅಗೆಯಬಹುದು. ತಿನ್ನಲು ಇಷ್ಟ ಪಡದವರು ಸೋಂಪಿನ ಕಷಾಯ ಅಥವಾ ಸೋಂಪಿನ ನೀರನ್ನು ಸೇವಿಸಬಹುದು.

​ದಾಲ್ಚಿನ್ನಿ

ದಾಲ್ಚಿನ್ನಿ ಚಕ್ಕೆಯನ್ನು ಆಯುರ್ವೇದ ಹಾಗೂ ಮನೆ ಮದ್ದಿನಲ್ಲಿ ಹೆಚ್ಚು ಪರಿಣಾಮಕಾರಿಯಾದ ವಸ್ತುವನ್ನಾಗಿ ಬಳಸಲಾಗುವುದು. ಇದರಲ್ಲಿ ಆಂಟಿಸ್ಪಾಸ್ಮೊಡಿಕ್ ಗುಣ ಇರುವುದರಿಂದ ಉರಿಯೂತದಂತಹ ಸಮಸ್ಯೆ ಹಾಗೂ ಸೆಳೆತವನ್ನು ಸುಲಭವಾಗಿ ನಿವಾರಿಸುತ್ತದೆ. ಮಹಿಳೆಯರು ಋತು ಸ್ರಾವದ ಸಮಯದಲ್ಲಿ ಉಂಟಾಗುವ ನೋವು ಹಾಗೂ ಸೆಳೆತವನ್ನು ನಿವಾರಿಸುತ್ತದೆ. ದಲ್ಚಿನ್ನಿಯಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಕಬ್ಬಿಣದ ಅಂಶವು ಅಧಿಕವಾಗಿರುವುದರಿಂದ ದೇಹಕ್ಕೆ ಪೂರಕ ಪೋಷಣೆ ನೀಡುವುದು. ಜೀರ್ಣ ಕ್ರಿಯೆಯನ್ನು ಸುಧಾರಿಸಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವುದು. ದಾಲ್ಚಿನ್ನಿ ಕಷಾಯ, ದಾಲ್ಚಿನ್ನಿ ಪುಡಿಯ ಸೇವನೆ ಅಥವಾ ಆಹಾರ ಪದಾರ್ಥಗಳಲ್ಲಿ ದಾಲ್ಚಿನ್ನಿಯನ್ನು ಬಳಸುವುದರ ಮೂಲಕ ಸೇವಿಸಬಹುದು.

​ಆಪಲ್ ಸೈಡರ್ ವಿನೆಗರ್ ಸೇಬು ವಿನೆಗರ್

ಆಪಲ್ ಸೈಡರ್ ವಿನೆಗರ್ ಅದ್ಭುತ ಔಷಧೀಯ ಗುಣಗಳನ್ನು ಒಳೊಂಡಿದೆ. ಇದರ ಸೇವನೆಯಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಸೆಳೆತ, ತಲೆ ನೋವು, ಕಿರಿಕಿರಿ, ಆಯಾಸ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಅಸ್ವಸ್ಥತೆಗಳನ್ನು ನಿವಾರಿಸಲು ಉತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುವುದು.

​ಶುಂಠಿ ಮತ್ತು ಜೇನುತುಪ್ಪ ಮಿಶ್ರಿತ ಚಹಾ

ಶುಂಠಿ ಮತ್ತು ಜೇನುತುಪ್ಪ ಅತ್ಯುತ್ತಮವಾದ ಔಷಧೀಯ ವಸ್ತುಗಳು. ಇವುಗಳನ್ನು ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಹಾಗೂ ಮನೆ ಮದ್ದಿನಲ್ಲಿ ಅಧಿಕವಾಗಿ ಬಳಸುತ್ತಾರೆ. ಶುಂಠಿ ಮತ್ತು ಜೇನು ಮಿಶ್ರಿತ ಚಹಾ ಸೇವನೆಯ ಮೂಲಕ ಸ್ನಾಯು ಸೆಳೆತ, ಆಂತರಿಕ ಕಿರಿಕಿರಿ ಹಾಗೂ ಮಾನಸಿಕ ಒತ್ತಡಗಳನ್ನು ಸುಲಭವಾಗಿ ತಡೆಯಬಹುದು. ಒಂದು ಕಪ್ ಶುಂಠಿ ಮತ್ತು ಜೆನುತುಪ್ಪ ಮಿಶ್ರಿತ ಚಹಾ ಸೇವಿಸಿದರೆ ಕ್ಯಾಮೊಮೈಲ್ ವಾಕರಿಕೆ ಮತ್ತು ಉಬ್ಬುವಿಕೆಯನ್ನು ತಡೆಯಬಹುದು. ಜೊತೆಗೆ ಜೀರ್ಣ ಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು.

​ಬಾಳೆಹಣ್ಣು

ಬಾಳೆಹಣ್ಣು ಎಲ್ಲರ ಕೈಗೆಟಕುವ ದರದಲ್ಲಿ ಸಿಗುವ ಸಾಮಾನ್ಯವಾದ ಹಣ್ಣು. ವರ್ಷದ ಎಲ್ಲಾ ದಿನಗಳಲ್ಲೂ ದೊರೆಯುವ ಈ ಹಣ್ಣು ವಿಟಮಿನ್ ಬಿ6, ಮೆಗ್ನೀಸಿಯಂ ಮತ್ತು ಮ್ಯಾಗ್ನೀಷಿಯನ್‍ಗಳಿಂದ ಸಮೃದ್ಧವಾಗಿರುತ್ತವೆ. ಈ ಆರೋಗ್ಯಕಾರಿ ಗುಣಗಳು ಹೊಂದಿರುವ ಹಣ್ಣನ್ನು ಮುಟ್ಟಿನ ಸಮಯದಲ್ಲಿ ಕಾಡುವ ನೋವು ಹಾಗೂ ಅಸ್ವಸ್ಥತೆಯನ್ನು ನಿವಾರಿಸಲು ಸವಿಯಬಹುದು. ಮುಟ್ಟಿನ ಸಮಯದಲ್ಲಿ ಅಥವಾ ನಿತ್ಯವೂ ನಿಗದಿತ ಸಮಯದಲ್ಲಿ ಬಾಳೆ ಹಣ್ಣನ್ನು ಸವಿಯುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು.

​ಅಧಿಕ ನೀರಿನ ಸೇವನೆ

ನೀರು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿ ಬೇಕಾದ ಪಾನೀಯ. ದೇಹದಲ್ಲಿ ಸೂಕ್ತ ಪ್ರಮಾಣದ ನೀರಿನಂಶ ಇದ್ದಾಗ ಅಥವಾ ಅಧಿಕ ನೀರನ್ನು ಸೇವಿಸಿದಾಗ ಸಾಕಷ್ಟು ಆರೋಗ್ಯ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಹಾಗಾಗಿ ನಿತ್ಯವೂ ಅಧಿಕ ನೀರನ್ನು ಕುಡಿಯುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ಇಲ್ಲವಾದರೆ ಅಧಿಕ ನೀರಿನಂಶಗಳಿಂದ ಕೂಡಿರುವ ಸೌತೆಕಾಯಿ, ಕಲ್ಲಂಗಡಿ, ಟೊಮ್ಯಾಟೋ ಮತ್ತು ಶತಾವರಿಯಂತಹ ವಸ್ತುಗಳನ್ನು ಸೇವಿಸಬೇಕು. ಇವು ನೈಸರ್ಗಿಕವಾಗಿ ದೇಹದ ಆರೋಗ್ಯವನ್ನು ವೃದ್ಧಿಸಿ, ಉರಿಯೂತ, ನೋವು, ವಾಕರಿಕೆ, ಆಯಾಸ ಹಾಗೂ ಮೂತ್ರ ಸಮಸ್ಯೆಗಳನ್ನು ನಿವಾರಿಸುತ್ತವೆ.

​ಹಣ್ಣು, ತರಕಾರಿ ಮತ್ತು ಧಾನ್ಯಗಳ ಸೇವನೆ

ನಾವು ಸೇವಿಸುವ ಆಹಾರವು ವರ್ಣರಂಜಿತವಾಗಿದ್ದರೆ ಸಾಕಷ್ಟು ಪೋಷಕಾಂಶಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಅಂದರೆ ವಿವಿಧ ಹಣ್ಣುಗಳು, ತರಕಾರಿ ಹಾಗೂ ಧಾನ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿದರೆ, ಊಟ ಹಾಗೂ ತಿಂಡಿಗಳು ವಿಭಿನ್ನತೆಯಿಂದ ಕೂಡಿರುತ್ತವೆ. ಜೊತೆಗೆ ಅವುಗಳಲ್ಲಿ ಇರುವಂತಹ ನಾರಿನಂಶ, ಖನಿಜಾಂಶ, ಪೋಕಕಾಂಶ ಮತ್ತು ನೈಸರ್ಗಿಕವಾದ ಸಿಹಿಯು ರಕ್ತದಲ್ಲಿ ಶುದ್ಧಿ ಹಾಗೂ ದೇಹದಲ್ಲಿ ಶಕ್ತಿಯನ್ನು ತುಂಬುವಂತೆ ಮಾಡುವುದು. ಆಗ ಮುಟ್ಟಿನ ಸಮಯದಲ್ಲಿ ಯಾವುದೇ ಕೊರತೆಗಳಿಲ್ಲದೆ ನೋವು ಹಾಗೂ ಉರಿಯೂತಗಳು ಕಾಣಿಸಿಕೊಳ್ಳದು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಮತೋಲನದಲ್ಲಿ ಇದ್ದರೆ ಹೊಟ್ಟೆ ನೋವು ಮತ್ತು ಉರಿಯೂತದ ಸಮಸ್ಯೆಗಳು ಶಮನವಾಗುತ್ತವೆ.

Leave a Comment