ದೇವಸ್ಥಾನದ ಒಳಗೆ ಹೋಗುವಾಗ ಗಂಟೆ ಯಾಕೆ ಬಾರಿಸಬೇಕು!

ದೇವಸ್ಥಾನದ ನಿರ್ಮಾಣ, ನಿರ್ಮಾಣದ ಸ್ಥಳ, ವಾಸ್ತು ಹಾಗೂ ದೇವಸ್ಥಾನಕ್ಕೆ ಮಾಡಲಾಗುವ ಪೀಠೋಪಕರಣಗಳು ಸೇರಿದಂತೆ ಇನ್ನಿತರ ಆಯಾಮಗಳು ಎಲ್ಲವೂ ಧಾರ್ಮಿಕ ರೀತಿ-ನೀತಿಗೆ ಅನುಗುಣವಾಗಿಯೇ ಇರಬೇಕು. ಇಲ್ಲವಾದರೆ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸೂಕ್ತವಾದ ವಾಸ್ತು, ಪ್ರಾಂಗಣ, ಒಳಾಂಗಣ, ಗರ್ಭಗುಡಿ, ಮಹಾ ದ್ವಾರ ಹಾಗೂ ಕಿಟಕಿಗಳು ಇರುತ್ತವೆ. ಇಲ್ಲವಾದರೆ ಅಲ್ಲಿ ದೈವ ಶಕ್ತಿಯ ಪ್ರಭಾವ ಇರುವುದಿಲ್ಲ ಎಂದು ಸಹ ಹೇಳಲಾಗುತ್ತದೆ. ದೇವಸ್ಥಾನ ಎಂದಾಗ ದೇವರು, ಸಾನಿಧ್ಯ ಎನ್ನುವ ಸಂಗತಿಯೊಂದಿಗೆ ಅಲ್ಲಿ ತೂಗಿ ಬಿಟ್ಟಿರುವ ಘಂಟೆಯ ಸಂಗತಿಗಳು ಮನಸ್ಸಿಗೆ ಮೊದಲು ಬರುತ್ತವೆ.

ಶುಭ ಸೂಚಕವಷ್ಟೇ ಅಲ್ಲ, ಮಹತ್ವಪೂರ್ಣವೂ ಆಗಿದೆ
ದೇವಸ್ಥಾನಕ್ಕೆ ಪ್ರವೇಶಿಸುತ್ತಿದ್ದಂತೆ ಆ ಘಂಟೆಯನ್ನು ಒಮ್ಮೆ ಬಡಿದು, ನಮಸ್ಕರಿಸುತ್ತೇವೆ. ನಂತರ ದೇವರ ಸುತ್ತ ಪ್ರದಕ್ಷಿಣೆಯನ್ನು ಹಾಕುವುದು ಸಹಜ. ಈ ಕ್ರಮವನ್ನು ಏಕೆ ಅನುಸರಿಸುತ್ತೇವೆ? ದೇವರ ದರ್ಶನ ಪಡೆಯುವಾಗ ದೇವರಿಗೆ ಏಕೆ ಘಂಟೆಯನ್ನು ಬಾರಿಸುತ್ತೇವೆ? ದೇವರ ಪೂಜೆಯ ವೇಳೆಯಲ್ಲಿ ಏಕೆ ಘಂಟೆಗಳ ನಾದವನ್ನು ಮಾಡಬೇಕು ಎನ್ನುವುದರ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲ. ನಂಬಿಕೆ ಹಾಗೂ ಪದ್ಧತಿಯ ಆಧಾರದ ಮೇಲೆ ಘಂಟೆಯನ್ನು ಬಾರಿಸುವ ಕೆಲಸವನ್ನು ಮಾಡುತ್ತೇವೆ. ಘಂಟೆಯನ್ನು ಬಾರಿಸುವುದು ಒಂದು ಶುಭ ಸೂಚಕ ಎನ್ನುವುದಷ್ಟೇ ನಮಗೆ ತಿಳಿದಿದೆ.ಹೌದು, ದೇವರ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಲೋಹದ ಘಂಟೆಯನ್ನು ಕಟ್ಟುತ್ತೇವೆ. ಅದನ್ನು ಬಡಿದು ನಂತರ ದೇವರಿಗೆ ನಮಸ್ಕಾರ ಮಾಡುತ್ತೇವೆ. ಇದರ ಹಿಂದೆ ಸಾಕಷ್ಟು ಧಾರ್ಮಿಕ ಹಾಗೂ ವೈಜ್ಞಾನಿಕ ವಿಷಯಗಳು ಅಡಗಿವೆ. ಅವುಗಳ ಸೂಕ್ತ ವಿವರ ಇಲ್ಲಿದೆ ನೋಡಿ

ದೇವಾಲಯದಲ್ಲಿ ಘಂಟೆಯನ್ನು ಬಾರಿಸುವುದು ಏಕೆ?

ದೇವಾಲಯದಲ್ಲಿ ವಿಶೇಷ ದೈವ ಶಕ್ತಿ ಹಾಗೂ ಧನಾತ್ಮಕ ಶಕ್ತಿಗಳ ಹರಿವು ನಿರಂತರವಾಗಿ ಇರುತ್ತದೆ. ಇಂತಹ ಒಂದು ಶಕ್ತಿಯ ದರ್ಶನ ಪಡೆಯಲು ಬರುವ ಭಕ್ತಾದಿಗಳು ಎಲ್ಲರೂ ದೇವರಿಗೆ ಘಂಟೆಯನ್ನು ಬಾರಿಸುತ್ತಾರೆ. ಹಾಗಾಗಿ ಪ್ರಾಂಗಣದಲ್ಲಿ ಹಾಗೂ ಪ್ರವೇಶ ದ್ವಾರದಲ್ಲಿ ಸಾಕಷ್ಟು ಘಂಟೆಯನ್ನು ನೇತಾಕುವುದನ್ನು ನಾವು ಕಾಣುತ್ತೇವೆ. ಘಂಟೆ ಬಡಿಯಲು ಮಕ್ಕಳು ಸಹ ಜಿಗಿದು ಬಾರಿಸುವ ಪ್ರಯತ್ನ ಮಾಡುತ್ತಾರೆ. ಘಂಟೆಯ ನಾದ ನಮ್ಮ ಕಿವಿಗೆ ಹಾಗೂ ಮಾನಸಿಕ ಚಿಂತನೆಗಳ ಮೇಲೆ ಸಾಕಷ್ಟು ಉತ್ತಮ ಪರಿಣಾಮವನ್ನು ಬೀರುತ್ತದೆ.

ಶುಭಕರವಾದ ನಾದ
ಲೋಹದಲ್ಲಿ ಉದ್ಭವಿಸುವ ಘಂಟೆಯ ನಾದವು ಅತ್ಯಂತ ಶುಭ ಸೂಚಕ. ಈ ಶಬ್ದವು ನಮ್ಮ ಸೂಪ್ತ ಮನಸ್ಸಿನಲ್ಲಿ ಕೇಂದ್ರೀಕರಿಸುವ ಶಕ್ತಿಯನ್ನು ಜಾಗ್ರತಗೊಳಿಸುತ್ತವೆ. ಜೊತೆಗೆ ನಮ್ಮ ಚಂಚಲ ಹಾಗೂ ಕ್ರಿಯಾಶೀಲ ಮನಸ್ಸನ್ನು ಒಮ್ಮೆ ಕೇಂದ್ರೀಕರಿಸಲು ಸಹಾಯ ಮಾಡುವುದು. ಮುಂಜಾನೆಯ ವೇಳೆ ಘಂಟೆಯ ಶಬ್ದವು ಆಧ್ಯಾತ್ಮಿಕವಾಗಿ ಹೆಚ್ಚಿನ ಶಕ್ತಿಯನ್ನು ನೀಡುವುದು. ಜೊತೆಗೆ ಸಂಜೆಯ ತನಕ ನಮ್ಮಲ್ಲಿ ಉಂಟಾಗುವ ಒತ್ತಡ ಹಾಗೂ ಭಾವನಾತ್ಮಕ ಹಿಡಿತವನ್ನು ಸಾಧಿಸುವ ಶಕ್ತಿಯನ್ನು ಕ್ರಿಯಾಶೀಲಗೊಳಿಸುವುದು ಎಂದು ಹೇಳಲಾಗುವುದು.

ದೇವಾಲಯದಲ್ಲಿ ಘಂಟೆಗಳನ್ನು ಹಾಕುವುದು ಕಡ್ಡಾಯವೇ?

ಮುಂಜಾನೆ ಮತ್ತು ಸಂಜೆಯ ವೇಳೆ ಪಟ್ಟಣ, ನಗರ ಅಥವಾ ಹಳ್ಳಿ ಎನ್ನುವ ಬೇಧವಿಲ್ಲದೆ ದೇವಾಲಯಗಳಲ್ಲಿ ಘಂಟೆಯ ನಾದವನ್ನು ಕೇಳುತ್ತೇವೆ. ದೇವಾಲಯದಲ್ಲಿ ಬಾರಿಸುವ ಈ ಘಂಟೆಯ ಶಬ್ದಗಳು ಸುತ್ತಲಿನ ಪ್ರದೇಶದಲ್ಲೂ ಆಧ್ಯಾತ್ಮಿಕ ಶಕ್ತಿಯನ್ನು ತುಂಬಲು ಸಹಾಯ ಮಾಡುವುದು. ದೇವಸ್ಥಾನದಲ್ಲಿ ಬಾರಿಸುವ ಘಂಟೆಯು ದೇವರನ್ನು ಎಬ್ಬಿಸುವ ಮತ್ತು ಎಲ್ಲರ ಮನಸ್ಸು ದೇವರ ಮೇಲೆಯೇ ಕೇಂದ್ರೀಕೃತವಾಗಿರಲಿ ಎನ್ನುವ ಉದ್ದೇಶವನ್ನು ಒಳಗೊಂಡಿದೆ ಎಂದು ಕೆಲವು ಕಥೆಗಳು ಹೇಳುತ್ತವೆ.

ಘಂಟೆಯನ್ನು ಬಾರಿಸುವುದೇಕೆ?

ಭಗವಂತನನ್ನು ಎಚ್ಚರಗೊಳಿಸಲೇ? ಭಗವಂತನು ಎಂದಿಗೂ ನಿದ್ರೆ ಮಾಡುವುದಿಲ್ಲ. ಸೃಷ್ಟಿಯ ಒಳಿತಿಗಾಗಿಯೇ ಕಣ್ಣನ್ನು ತೆರೆದಿರುತ್ತಾನೆ ಎನ್ನಲಾಗುವುದು. ನಾವು ಬಂದಿದ್ದೇವೆ ಎನ್ನುವುದನ್ನು ತಿಳಿಸುವುದಕ್ಕಾ? ಸರ್ವ ಜ್ಞಾನ ಹೊಂದಿರುವ ಭಗವಂತನಿಗೆ ನಮ್ಮ ಉಪಸ್ಥಿತಿ ಅಥವಾ ಆಗಮನ ಸಂಗತಿಯನ್ನು ತಿಳಿಸುವ ಅಗತ್ಯ ಇರುವುದಿಲ್ಲ. ದೇವರ ಸ್ಥಾನಕ್ಕೆ ಬರಲು ಅನುಮತಿ ಪಡೆಯುವ ಸಲುವಾಗಿಯೇ? ದೇವರನ್ನು ಕಾಣಲು ಅಥವಾ ಧ್ಯಾನವನ್ನು ಮಾಡಲು ದೇವರ ಅನುಮತಿ ಪಡೆಯಬೇಕಿಲ್ಲ. ಭಕ್ತಿಯಿಂದ ಮಾಡುವ ಧ್ಯಾನ ಮತ್ತು ಪೂಜೆಯನ್ನು ದೇವನು ಸದಾ ಸ್ವೀಕರಿಸುವನು. ಜೊತೆಗೆ ನಮ್ಮನ್ನು ಆ ದೇವನು ಎಲ್ಲಾ ಸಮಯದಲ್ಲೂ ಸ್ವೀಕರಿಸುತ್ತಾನೆ. ಹಾಗಿದ್ದಮೇಲೆ ನಾವೇಕೆ ಘಂಟೆಯನ್ನು ಬಾರಿಸಬೇಕು?

ಶುಭ ಸಂಗತಿಗಾಗಿ ಘಂಟೆಯ ನಾದ

ಘಂಟೆಯ ಶಬ್ದವು ಭಗವಂತನ ಸಾರ್ವತ್ರಿಕವಾದ ನಾಮ ಓಂ ಎಂಬ ಧ್ವನಿಯನ್ನು ಮೊಳಗಿಸುತ್ತದೆ. ಸರ್ವವೂ ಶುಭಕರವಾಗಿ ಸಾಗಲು ದೇವರ ಅನುಗ್ರಹ ಬೇಕು. ಘಂಟೆಯ ಧ್ವನಿ ಅಥವಾ ಶಬ್ದದಿಂದ ಸುತ್ತಲ ಪರಿಸರದಲ್ಲಿಯೂ ದೇವರ ನಾಮ ಮೊಳಗಿಸುತ್ತದೆ. ಆಗ ಎಲ್ಲೆಡೆಯೂ ಶುಭ ಶಕ್ತಿಯ ಹರಿವು ಉಂಟಾಗುವುದು. ಜೊತೆಗೆ ಶುಭ ಸಂಗತಿಯು ಉದ್ಭವ ಆಗುತ್ತದೆ.

ಒಂದು ಪ್ರಮುಖ ಆಚರಣೆ

ಧಾರ್ಮಿಕ ಆಚರಣೆಯ ಅಡಿಯಲ್ಲಿ ಸಾಕಷ್ಟು ನಾದಗಳನ್ನು ಬಾರಿಸುತ್ತೇವೆ. ಶಂಖ, ತಾಳ, ಘಂಟೆ, ವಾದ್ಯ, ಮದ್ದಳೆ ಮುಂತಾದ ಉಪಕರಣಗಳಿಂದ ನಾದವನ್ನು ಗೈಯುತ್ತಾರೆ. ಆದರೆ ಇವುಗಳನ್ನು ನಿತ್ಯವೂ ಬಾರಿಸುವುದಿಲ್ಲ. ಕೇವಲ ಘಂಟೆಯನ್ನು ಮಾತ್ರ ಬಾರಿಸುತ್ತೇವೆ. ಘಂಟೆಯ ನಾದದಿಂದ ಮನಸ್ಸು ಪ್ರಶಾಂತಗೊಳ್ಳುವುದು. ಆರಾಧಕರ ಮತ್ತು ಭಕ್ತರ ಮನಸ್ಸಿನಲ್ಲಿ ದೇವರ ಮೇಲೆ ಭಕ್ತಿ, ಉತ್ಸಾಹ, ಏಕಾಗ್ರತೆ ಮತ್ತು ಆಂತರಿಕ ಶಾಂತಿ ಮತ್ತು ನಿರ್ಮಲ ಮನಸ್ಸನ್ನು ಪ್ರೇರೇಪಿಸುವುದು.

ಕುತೂಹಲಕರವಾದ ಮೂರು ಸಂಗತಿಗಳು

ದೇವಾಲಯದಲ್ಲಿ ಘಂಟೆಯನ್ನು ಹಾಕಲು ಇರುವ ಮೂರು ಕುತೂಹಲಕಾರಿ ಸಂಗತಿಗಳಿವೆ. ಪವಿತ್ರವಾದ ಲೋಹದಿಂದ ಮಾಡಿದ ಗಂಟೆಯನ್ನು ದೇವಸ್ಥಾನದ ಬಾಗಿಲಲ್ಲಿ ಹಾಗೂ ಹೊರಾಂಗಣದಲ್ಲಿ ಹಾಕುತ್ತಾರೆ. ಇದರ ಅರ್ಥ ಎಲ್ಲಾ ಭಕ್ತರಿಗೂ ಗಂಟೆಯನ್ನು ಬಾರಿಸಲು ಅನುಕೂಲವಾಗಲಿ ಎನ್ನುವುದು. ಪ್ರತಿ ದಿನ ದೇವರ ಪೂಜೆಯನ್ನು ಮುಂಜಾನೆ ಮತ್ತು ಸಂಜೆಯ ವೇಳೆ ಮಾಡಲಾಗುವುದು. ಆ ಸಮಯದಲ್ಲಿ ಸುತ್ತಮ ಪರಿಸರ ಹಾಗೂ ಭಕ್ತರ ಮನಸ್ಸು ತಿಳಿಯಾದ ಮತ್ತು ಏಕಾಗ್ರತೆಯಿಂದ ಇರಬೇಕು ಎನ್ನುವ ಉದ್ದೇಶವನ್ನು ಒಳಗೊಂಡಿದೆ.

ದೇವಾಲಯದಲ್ಲಿ ಘಂಟೆ ಹಾಕಲು ಕುತೂಹಲಕಾರಿಯಾದ ಎರಡನೇ ಸಂಗತಿ

ಪ್ರತಿಯೊಂದು ಹಿಂದೂ ದೇವಸ್ಥಾನದಲ್ಲಿ ಘಂಟೆಯನ್ನು ಹಾಕುತ್ತಾರೆ. ಅವು ವಿಶೇಷವಾದ ಧಾರ್ಮಿಕ ಸಂಗತಿಗಳನ್ನು ಒಳಗೊಂಡಿವೆ. ಸ್ಕಂದ ಪುರಾಣಗಳ ಪ್ರಕಾರ ದೇವಾಲಯದಲ್ಲಿ ಘಂಟೆ ಬಾರಿಸಿದರೆ ಮನುಷ್ಯನ ನೂರು ಜನ್ಮದ ಪಾಪಗಳು ತೊಳೆದುಹೋಗುತ್ತವೆ. ದೇವಸ್ಥಾನದ ಘಂಟೆಗಳು ಕರೆಯ ಸಂಕೇತವಾಗಿರುತ್ತವೆ. ಧರ್ಮ ಶಾಸ್ತ್ರದ ಪ್ರಕಾರ ಅನೇಕ ಘಂಟೆಗಳನ್ನು ಬಾರಿಸಿದರೆ ವಿನಾಶದ ಸಂಗತಿಗಳು ಹಾಗೂ ಅಪಾಯದ ಸಂಗತಿಗಳು ದೂರವಾಗುತ್ತವೆ.

ಕುತೂಹಲಕಾರಿಯಾದ ಮೂರನೇ ಸಂಗತಿ

ದೇವಸ್ಥಾನದಲ್ಲಿ ಘಂಟೆಯನ್ನು ಕಟ್ಟುವುದು ಕೇವಲ ಧಾರ್ಮಿಕ ಸಂಗತಿಗಳಿಗೆ ಸೀಮಿತವಾಗಿಲ್ಲ. ಅದರೊಟ್ಟಿಗೆ ವೈಜ್ಞಾನಿಕ ಸಂಗತಿಯೂ ಬೆಸೆದುಕೊಂಡಿದೆ. ಘಂಟೆಗಳು ಮೊಳಗಿದಾಗ ವಾತಾವರಣದಲ್ಲಿ ಕಂಪನವು ಸೃಷ್ಟಿಯಾಗುತ್ತದೆ. ಇದು ಗಾಳಿಯ ಹರಿವಿನೊಂದಿಗೆ ತುಂಬಾ ದೂರದಲ್ಲಿ ಹರಡುತ್ತವೆ. ಈ ಕಂಪನಕ್ಕೆ ಒಳಗಾಗುವ ಅಪಾಯಕಾರಿ ಕೀಟಗಳು, ಕಣಗಳು ಮತ್ತು ಋಣಾತ್ಮಕ ಶಕ್ತಿಗಳು ಸಾಯುತ್ತವೆ. ವಾತಾವರಣವು ಸ್ವಚ್ಛ ಹಾಗೂ ಆರೋಗ್ಯಕರವಾಗಿ ಇರುತ್ತದೆ ಎಂದು ಹೇಳಲಾಗುವುದು.

ದೇವಸ್ಥಾನದ ಘಂಟೆಯ ಹಿಂದಿನ ವೈಜ್ಞಾನಿಕ ಹಿನ್ನೆಲೆ

ಪುರಾತನ ಕಾಲದ ದೇವಸ್ಥಾನಗಳಲ್ಲಿ ಹೆಚ್ಚಿನ ದೇವಾಲಯಗಳು ಪ್ರವೇಶ ದ್ವಾರದಲ್ಲಿ ದೊಡ್ಡ ಘಂಟೆಯನ್ನು ಹೊಂದಿರುತ್ತದೆ. ದೇವಾಲಯವನ್ನು ಪ್ರವೇಶಿಸುವಾಗ ಮೊದಲು ದೊಡ್ಡ ಘಂಟೆಯನ್ನು ಬಾರಿಸುತ್ತಾರೆ. ಅದು ದೇವಸ್ಥಾನದ ಪದ್ಧತಿ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ದೇವಾಲಯದ ದೊಡ್ಡ ಘಂಟೆಗಳು ಸಾಮಾನ್ಯವಾಗಿ ಕ್ಯಾಡ್ಮಿಯಮ್, ಸೀಸ, ತಾಮ್ರ, ಸತು, ನಿಕಲ್, ಕ್ರೋಮಿಯಂ ಮತ್ತು ಮ್ಯಾಂಗನೀಸ್‍ಗಳನ್ನು ಒಳಗೊಂಡಿರುತ್ತದೆ. ಈ ಲೋಹಗಳ ಮಿಶ್ರಣದಲ್ಲಿ ತಯಾರಾದ ಘಂಟೆಗಳನ್ನು ಬಾರಿಸಿದಾಗ ನಮ್ಮ ಎಡ ಮತ್ತು ಬಲ ಮೆದುಳಿನ ಮೇಲೆ ಏಕತೆಯನ್ನು ಉಂಟುಮಾಡುತ್ತವೆ.

ದೇವಾಲಯದಲ್ಲಿ ಏಕೆ ಘಂಟೆಗಳು ಇರಬೇಕು?

ದೇವಾಲಯದಲ್ಲಿ ನಾವು ಬಾರಿಸುವ ಘಂಟೆಯ ನಾದವು ತೀಕ್ಷ್ಣವಾದ ಮತ್ತು ಶಾಶ್ವತವಾದ ಉತ್ಪಾದನೆಯನ್ನು ಮಾಡುತ್ತದೆ. ಒಮ್ಮೆ ಘಂಟೆಯಿಂದ ಹೊರಡುವ ನಾದವು ಕನಿಷ್ಠ ಏಳು ಸೆಕೆಂಡ್‍ಗಳ ಕಾಲ ಇರುತ್ತದೆ. ನಮ್ಮ ದೇಹದಲ್ಲಿಯೂ ಏಳು ರಂಧ್ರಗಳು ಮತ್ತು ಚಕ್ರಗಳಿರುತ್ತವೆ. ಘಂಟೆಯ ನಾದವು ಅವುಗಳನ್ನು ಪ್ರವೇಶಿಸಿ ಸ್ಪರ್ಶಿಸುತ್ತವೆ. ನಮ್ಮ ಮೆದುಳಿನ ಮೇಲೆ ಗಮನಾರ್ಹ ಪ್ರಭಾವ ಬೀರುವುದರ ಜೊತೆಗೆ ಮನಸ್ಸಿಗೆ ನಿರಾಳತೆಯನ್ನು ನೀಡುವುದು. ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಘಂಟೆಯನ್ನು ಬಾರಿಸಿದರೆ ನಿಮ್ಮ ಮನಸ್ಸು ಮತ್ತು ಮಿದುಳು ಜಾಗ್ರತವಾಗುತ್ತದೆ. ಏಕಾಗ್ರತೆಯಿಂದ ದೇವರಲ್ಲಿ ಮನಸ್ಸನ್ನು ಕೆಂದ್ರೀಕರಿಸಲು ಸಹಾಯ ಮಾಡುವುದು. ಇವು ದೇವಸ್ಥಾನದಲ್ಲಿ ಅಳವಡಿಸುವ ಘಂಟೆಗಳ ಹಿಂದೆ ಇರುವ ನಿಜವಾದ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು ಎಂದು ಧಾರ್ಮಿಕ ಹೇಳಿಕೆಗಳು ತಿಳಿಸುತ್ತವೆ.

https://www.youtube.com/watch?v=n4YdT45gYL4

Leave a Comment